ಚಾಮರಾಜನಗರ: ಸ್ವಾಮಿ ವಿವೇಕಾನಂದರ ಸರಳತೆ, ನೈತಿಕತೆ, ಜೀವನದ ಮೌಲ್ಯಗಳನ್ನು ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಎಂ. ಶ್ರೀಧರ ಅವರು ಸಲಹೆ ಮಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಎನ್ಎಸ್ಎಸ್, ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವದಿನ ಹಾಗೂ ಯುವ ಸಪ್ತಾಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಸಾರ್ವಕಾಲಿಕ ನುಡಿ ಹೇಳಿ ಎದ್ದೇಳಿ ಗುರಿ ಮಟ್ಟುವ ತನಕ ನಿಲ್ಲದಿರಿ ಎಂಬುದನ್ನು ಯುವ ಜನರು ಅರ್ಥ ಮಾಡಿಕೊಳ್ಳಬೇಕು. ಅವರ ಜೀವನ ಚರಿತ್ರೆ ಪುಸ್ತಕ ಓದಬೇಕು. ಸ್ವಾಮಿ ವಿವೇಕಾನಂದರ ಮೌಲ್ಯಗಳನ್ನು ಪರಿಪಾಲಿಸಬೇಕು ಎಂದರು.
ದೇಶದ ಘನತೆ, ಗೌರವ ಕಾಪಾಡುವ ಹೊಣೆಗಾರಿಕೆ ಯುವ ಜನತೆಯ ಮೇಲಿದೆ. ಜೀವನದಲ್ಲಿ ಗುರಿ ಮುಖ್ಯವಾಗಿದೆ. ಉನ್ನತ ಸಾಧನೆ ಮಾಡುವ ಕಿಚ್ಚು ಇರಬೇಕು. ಯಾರು ಸಹ ಕಷ್ಟ ಪಡದೆ ಮೇಲೆ ಬಂದವರಲ್ಲ ಎಂದು ಅರಿತು ನಿಮ್ಮ ಜೀವನದ ಪುಟಗಳಲ್ಲಿ ಎಲ್ಲವನ್ನು ಸಹ ಪ್ರೇರಣೆಯಾಗಿ ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ನ್ಯಾಯಾಧೀಶರಾದ ಶ್ರೀಧರ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ. ದೇವರಾಜ್ ಅವರು ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದಲ್ಲಿ ದೇಶದ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅವರ ಸಿದ್ಧಾಂತಗಳು ವಿಶ್ವಕ್ಕೆ ಮಾದರಿ ಯಾಗಿವೆ ಎಂದರು.
ಚಿಕ್ಕ ವಯಸ್ಸಿನಲ್ಲೇ ವಿವೇಕಾನಂದರು ಅಗಾಧ ಸಾಧನೆ ಮಾಡಿದ್ದಾರೆ. ಅವರು ಯುವ ಜನರಿಗೆ ಮಾದರಿಯಾಗಿದ್ದಾರೆ. ವಿವೇಕಾನಂದರನ್ನು ಅನುಸರಿಸಬೇಕಿರುವ ನಮ್ಮ ದೇಶದ ಯುವ ಶಕ್ತಿ ದಿಕ್ಕು ತಪ್ಪಬಾರದು ಎಂದು ದೇವರಾಜ್ ಅವರು ತಿಳಿಸಿದರು.
ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ. ಮಹೇಶ್ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಬೇಕು. ಕನಸುಗಳು ಯಾವಾಗಲೂ ನಿಮಗೆ ಸ್ಪೂರ್ತಿದಾಯಕವಾಗಿರಬೇಕು. ಶಿಕ್ಷಣ ಪಡೆದು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾದ ಡಾ, ಜೈ ಕುಮಾರ್ ವಿಶೇಷ ಉಪನ್ಯಾಸ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್. ಎಲ್. ಸುರೇಶ್, ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಿ. ಬಂಗಾರು, ನೆಹರು ಯುವ ಕೇಂದ್ರದ ಸಹನಾ, ಶಂಕರ್ ಉಪಸ್ಥಿತರಿದ್ದರು.
ಇದೇ ವೇಳೆ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
