ಚಾಮರಾಜನಗರ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಜಿಲ್ಲೆಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಡ್ಡಾಯವಾಗಿ ಸೂಕ್ತ ದಾಖಲೆಗಳೊಂದಿಗೆ ಹಣಕಾಸು ವಹಿವಾಟು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚುನಾವಣಾ ಹಿನ್ನೆಲೆಯಲ್ಲಿ ನಡೆದ ಜಿಲ್ಲೆಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಡೆಸುವ ದಿನನಿತ್ಯದ ವಹಿವಾಟುಗಳು ಪಾರದರ್ಶಕವಾಗಿರಬೇಕು. ಸಂಸ್ಥೆಯಿಂದ ನೀಡಲಾಗುವ ಸಾಲ, ಕಂತಿನ ಮರುಪಾವತಿ, ಗ್ರಾಹಕರು ಸಾಲ ಪಡೆದುಕೊಂಡ ವಿವರ, ಮೊತ್ತ ಎಲ್ಲವನ್ನೂ ದಾಖಲೆಗಳ ಸಮೇತ ಒದಗಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಂಸ್ಥೆಗಳು ಒಟ್ಟಾರೆ ವಹಿವಾಟಿನ ಮೊತ್ತವನ್ನು ಬ್ಯಾಂಕುಗಳಿಗೆ ಜಮೆ ಮಾಡುವಾಗ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಗ್ರಾಹಕರು, ಸಾಲ ಪಡೆದಿರುವವರಿಂದ ಕಂತು ವಸೂಲಿ ಮಾಡಿದ ಸಮಯದಲ್ಲಿ ರಶೀದಿ ಇನ್ನಿತರ ಪತ್ರಗಳು ಪಡೆದುಕೊಂಡಿರಬೇಕು. ಬ್ಯಾಂಕುಗಳಿಗೆ ದಾಖಲೆಗಳೊಂದಿಗೆ ವ್ಯವಹರಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೀತಿ ಸಂಹಿತೆ ಅವಧಿಯಲ್ಲಿ ನಡೆಸುವ ಎಲ್ಲಾ ಆರ್ಥಿಕ ವಹಿವಾಟು ಕುರಿತು ನಿರ್ದಿಷ್ಟ ದಾಖಲೆಗಳನ್ನು ಆಯಾ ಸಮಯದಲ್ಲಿಯೇ ಒದಗಿಸಬೇಕಾಗುತ್ತದೆ. ನಗದು ಸಾಗಣೆ ಮಾಡುವಾಗ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು ಎಂದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಿಗದಿತ ಅವಧಿಯಲ್ಲಿ ಬ್ಯಾಂಕುಗಳಿಗೆ ತಮ್ಮ ವಹಿವಾಟಿನ ಹಣ ಜಮೆ ಮಾಡಬೇಕು. ಗ್ರಾಹಕರಿಗೆ, ಸದಸ್ಯರಿಗೆ ಸಾಲ ವಿತರಿಸುವ ಮೊದಲು ಮಾಹಿತಿ ನೀಡಬೇಕು. ಸಂಸ್ಥೆಗಳು ಹಣ ಸಾಗಣೆ ಮಾಡುವ ಅಧಿಕಾರಿ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿರಬೇಕು. ಅನುಮಾನಾಸ್ಪದ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಸೂಚಿಸಿದರು.
ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಎಂ.ಎನ್. ಸುರೇಖಾ, ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
