
ಚಾಮರಾಜನಗರ:ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ರಚಿಸಿರುವ ನಿಗಮ, ಮಂಡಳಿಗಳಿಂದ ಸೌಲಭ್ಯ, ಸವಲತ್ತು ಪಡೆದು ಸಮಾಜದ ಜನರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಹಿಂದೆ ವಿಶ್ವಕರ್ಮರು ಎಲ್ಲಾ ಉದ್ಯೋಗಗಳನ್ನು ಬಲ್ಲವರಾಗಿದ್ದರು. ಇಡೀ ಮಾನವ ಕುಲಕ್ಕೆ ವಿಶ್ವಕರ್ಮರ ಕಾಯಕ ಅಗತ್ಯವಾಗಿದೆ. ಅವರ ಕುಲಕಸುಬನ್ನು ಉಳಿಸಿಕೊಂಡು ಬಂದಿರುವ ಸಮಾಜಕ್ಕೆ ಕೇವಲ ಜಯಂತಿ ಆಚರಿಸಿದರೆ ಸಾಲದು, ನಿಗಮ ಮಂಡಳಿಗಳಿಂದ ದೊತರೆಯುವ ಸೌಲಭ್ಯ, ಸವಲತ್ತುಗಳನ್ನು ಬಳಸಿಕೊಂಡು ವಿಶ್ವಕರ್ಮ ಸಮಾಜವು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ವಿಶ್ವಕರ್ಮ ಸಮಾಜದ ಜನರು ಸಂಘಟಿತರಾಗಿ ರಾಜಕೀಯವಾಗಿ ಅಭಿವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸಿದರೆ ಸರ್ಕಾರವು ನಿಗಮದ ಮೂಲಕ ಇನ್ನಷ್ಟು ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ ಯೋಜನೆ, ಸ್ವ ಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆ ಮುಂತಾದ ಜನಪರ ಯೋಜನೆಗಳ ಫಲಾನುಭವಿಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾಡಾ ಅಧ್ಯಕ್ಷರಾದ ಬಿ. ನಿಜಗುಣರಾಜು ಅವರು ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ, ವಿಶ್ವಕರ್ಮ ಮಾಡದ ಕೆಲಸವಿಲ್ಲ ಎಂಬಂತೆ ವಿಶ್ವಕರ್ಮ ಸಮಾಜದವರು ಚಿನ್ನ, ಕಬ್ಬಿಣ, ಮರಗೆಲಸ, ಕಮ್ಮಾರ ಇತ್ಯಾದಿ ಕೆಲಸಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಸರ್ಕಾರವು ವಿಶ್ವಕರ್ಮರ ಕಸುಬನ್ನು ತಾಂತ್ರಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದರು.
ಮುಖ್ಯ ಭಾಷಣ ಮಾಡಿದ ಮೈಸೂರು ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸಿ. ತೇಜೋವತಿ ಅವರು ಮಾತನಾಡಿ ವಿಶ್ವಕರ್ಮರು ಸಾಧನ-ಸಲಕರಣೆಗಳ ಮೂಲಕ ಸರ್ವಧರ್ಮದವರೊಂದಿಗೂ ಸಮನ್ವಯ ಸಾಧಿಸಿ ವಿವಿಧ ಜನಾಂಗದವರ ಸಂಸ್ಕೃತಿಗೆ ತಕ್ಕಂತೆ ವಿಗ್ರಹ ಕೆತ್ತನೆ ಮಾಡುತಿದ್ದರು ಎಂದರು.
ಸಾವಿರಾರು ವರ್ಷಗಳ ಹಿಂದೆಯೇ ಮೂರ್ತಿ, ಪ್ರತಿಮೆಗಳ ಗಾತ್ರ, ಅಳತೆಯನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ವಿಜ್ಞಾನ, ತಂತ್ರಜ್ಞಾನದಲ್ಲಿ ನೈಪುಣ್ಯತೆ ಹೊಂದಿದ್ದರು. ದೇಶದ ಬೆನ್ನೆಲುಬು ರೈತ, ಆದರೆ ನೇಗಿಲು ಸಲಕರಣೆಗಳನ್ನು ಮಾಡಿಕೊಡುವ ವಿಶ್ವಕರ್ಮರು ರೈತನ ಬೆನ್ನೆಲುಬಾಗಿದ್ದಾರೆ. ಅಂತಹ ಕುಲಕಸುಬು ನಶಿಸಿ ಹೋಗದಂತೆ ಇಂದಿನ ಶಿಕ್ಷಣದಲ್ಲಿ ಅಳವಡಿಕೆಯಾಗಬೇಕು ಎಂದು ತೇಜೋವತಿ ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು ಅವರು ಮಾತನಾಡಿ ವಿಶ್ವಕರ್ಮ ವೃತ್ತಿಯನ್ನು ಹೊರತುಪಡಿಸಿದ ಸಮಾಜವನ್ನು ಕಲ್ಪನೆಯೂ ಸಹ ಮಾಡಲಾಗದು. ಅವರು ಮಾಡಿದ ಆಭರಣಗಳು ನಾಗರಿಕತೆಯ ಬೆಳವಣಿಗೆಯ ಬೆಳಕು ಚೆಲ್ಲುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ವಿಶ್ವಕರ್ಮ ನಿಗಮದ ಸದಸ್ಯ ಶ್ರೀನಿವಾಸಮೂರ್ತಿ, ಮಧು, ಸಮಿತಿಯ ಅಧ್ಯಕ್ಷರು ಸೋಮಣ್ಣ ಆಚಾರ್, ಮುಖಂಡರಾದ ಅನಂತಕುಮಾರ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಡನೆ ಹೊರಟ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.
