ಚಾಮರಾಜನಗರ: ನಗರದ 7ನೇ ವಾರ್ಡ್‌ನ ಮೂಡ್ಲುಪುರದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಖಾತಾ ಆಂದೋಲನಕ್ಕೆ ಚಾಲನೆ ನೀಡಿದರು.
ಚಾಮರಾಜನಗರದ 7ನೇ ವಾರ್ಡ್‌ನಲ್ಲಿನ ಮೂಡ್ಲುಪುರ ಬಡಾವಣೆಯ ಶ್ರೀ ಬಸವೇಶ್ವರ ದೇವಾಲಯದ ಅವರಣದಲ್ಲಿಂದು ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಖಾತಾ ಆಂದೋಲನದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಜಿಲ್ಲಾಧಿಕಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸರ್ಕಾರವು ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಖಾತಾ ಆಂದೋಲನವನ್ನು ಹಮ್ಮಿಕೊಂಡಿದೆ. ಸಾಕಷ್ಟು ಜನರು ತಾವು ವಾಸಿಸುವ ಸ್ಥಳಗಳಿಗೆ ಸಂಬಂಧಿಸಿದಂತೆ ಆಸ್ತಿ ದಾಖಲೆಗಳಿಲ್ಲದೇ ಪದೇಪದೇ ನಗರಸಭೆ ಕಚೇರಿಗೆ ಅಲೆದಾಡುವುದು ಸರ್ವೇ ಸಾಮಾನ್ಯವಾಗಿತ್ತು. ಖಾತಾ ಆಂದೋಲನದ ಮೂಲಕ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಕಾರ್ಯಕ್ರಮವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಖಾತಾ ಆಂದೋಲನವನ್ನು ನಡೆಸುತ್ತಿದೆ. ನಿವೇಶನಗಳಿಗೆ ಮೂಲದಾಖಲಾತಿ ಇಲ್ಲದ ಫಲಾನುಭವಿಗಳು ಅವಶ್ಯ ದಾಖಲೆ ಪಡೆದು ಖಾತೆ ಮಾಡಿಸಿಕೊಳ್ಳಬಹುದು. ಈ ಅಧಾರದಲ್ಲಿ ಮುಂದಿನ ದಿನಗಳಲ್ಲಿ ಖಾತೆ ಹಾಗೂ ಇ-ಸ್ವತ್ತು ನೀಡಲು ಅನುಕೂಲವಾಗಲಿದೆ. ಖಾತಾ ಆಂದೋಲನದ ಬಗ್ಗೆ ನಗರಸಭೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನಂಬಿಕೆ ನಶಿಸಿಹೋಗುತ್ತಿದೆ. ಕೃಷಿ ಜಮೀನು, ಮನೆ, ಆಸ್ತಿಗಳಿಗೆ ಸಂಬಂಧಿಸಿದಂತೆ ಪೋಷಕರು ತಮ್ಮ ಮಕ್ಕಳಿಗೆ ತಿಳಿಸಿ ಹೇಳಬೇಕು. ಆಗ ಮಕ್ಕಳಿಗೂ ಸಹ ಆಸ್ತಿ ವಿವರಗಳು, ದಾಖಲೆಗಳ ಬಗ್ಗೆ ಜಾಗೃತಿ ಮೂಡಲಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ನಗರಸಭೆ ಆಧ್ಯಕ್ಷರಾದ ಸಿ.ಎಂ. ಆಶಾ ಅವರು ಮಾತನಾಡಿ ಖಾತಾ ಆಂದೋಲನ ಈ ಮೊದಲೇ ಆಗಬೇಕಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಆಂದೋಲನಕ್ಕೆ ಹಿನ್ನಡೆ ಉಂಟಾಗಿತ್ತು. ನಗರದ ೩೦ ವಾರ್ಡ್‌ಗಳಲ್ಲಿಯೂ ಖಾತಾ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ. ೫೦-೬೦ ವರ್ಷಗಳಿಂದ ಮೂಲ ದಾಖಲೆಗಳಿಲ್ಲದೇ ವಾಸಿಸುತ್ತಿರುವ ಕುಟುಂಬಗಳಿಗೆ ಖಾತಾ ಮಾಡಿಕೊಡಲು ಆದ್ಯತೆ ನೀಡಲಾಗುವುದು ಎಂದರು.
ಪೌರಾಯುಕ್ತರಾದ ರಾಮದಾಸ್ ಮಾತನಾಡಿ ಇ-ಸ್ವತ್ತು ತಂತ್ರಾಂಶ ೨೦೧೨-೧೩ನೇ ಸಾಲಿನಲ್ಲಿ ಜಾರಿಗೆ ಬಂದಿದ್ದು, ನಗರಸಭೆಗೆ ಈವರೆಗೆ ಇ-ಸ್ವತ್ತು ಪಡೆಯಲು ೨೪೮೭೭ ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ೯೬೦೦ ಮಂದಿಗೆ ಇ-ಸ್ವತ್ತು ಆಗಿದ್ದು, ೧೫೨೭೭ ಅರ್ಜಿಗಳು ಬಾಕಿ ಇವೆ. ಮನೆಕಟ್ಟಲು ಹಾಗೂ ಮಾರಾಟ ಮಾಡಲು ಮತ್ತು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಖಾತೆ ಹಾಗೂ ಇ-ಸ್ವತ್ತು ಅವಶ್ಯಕವಾಗಿರುವುದರಿಂದ ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಫಲಾನುಭವಿಗಳಿಗೆ ಖಾತಾ ದಾಖಲೆಗಳನ್ನು ವಿತರಿಸಿದರು. ಅಲ್ಲದೇ ಅತಿವೃಷ್ಠಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು.
ನಗರಸಭೆ ಕಂದಾಯ ನಿರೀಕ್ಷಕರಾದ ಶರವಣ, ಸೀನಿಯರ್ ಪ್ರೋಗ್ರಾಮರ್ ಸಿದ್ದಪ್ಪಾಜಿ, ಇತರರು ಕಾರ್ಯಕ್ರಮ ಇದ್ದರು.