ಚಾಮರಾಜನಗರ: ಆಧುನೀಕರಣ ಭರದಲ್ಲಿ ಜಾನಪದ ಕಲೆಗಳು ಇಂದು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸಿ ಪೋಷಿಸುವುದು ಎಲ್ಲರ ಹೊಣೆ ಎಂದು ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳ ಕಲಾ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನಪದಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುತ್ತವೆ. ಅವುಗಳನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕು. ಜಾನಪದಗಳಿಗೆ ಗೌರವ ಸಲ್ಲಿಸಬೇಕು. ಚಾಮರಾಜನಗರವು ಜಾನಪದ ಕಲೆಗಳ ತವರೂರು ಆಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಶಿಬಿರದ ಜಿಲ್ಲಾ ಸಂಚಾಲಕರಾದ ಮೂಡ್ನಾಕೂಡು ಪ್ರಕಾಶ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಅಮೂಲ್ಯ ಕಲಾ ಸಂಪತ್ತು ಇರುವ ಜಾನಪದ ಸಂಸ್ಕೃತಿಗೆ ಬಗ್ಗೆ ಯುವ ಪೀಳಿಗೆ ಹೆಚ್ಚು ಒಲವು ತೋರಬೇಕು. ಜಾನಪದ ಹಾಡುಗಾರರಿಗೆ, ವಾದ್ಯಗಳಿಗೆ, ನೃತ್ಯಗಳಿಗೆ, ನಾಟಕಗಳಿಗೆ ಸರ್ಕಾರ ನೆರವು ನೀಡುತ್ತಿದೆ. ಇಂತಹ ಯೋಜನೆಗಳನ್ನು ಉಪಯೋಗಿಸಿಕೊಂಡು ಜಾನಪದವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಮಳವಳ್ಳಿ ಮಹದೇವಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಗರಸಭೆ ಸದಸ್ಯರಾದ ಹೆಚ್.ಎಸ್. ಮಮತ, ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ತರಬೇತಿ ಶಿಬಿರದ ಜಿಲ್ಲಾ ಸಂಚಾಲಕರಾದ ಪದ್ಮ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್. ಗುರುಲಿಂಗಯ್ಯ, ಕಲಾವಿದರಾದ ಕೈಲಾಸಮೂರ್ತಿ, ಕೆಬ್ಬೇಪುರ ಸಿದ್ದರಾಜು, ಪುಟ್ಟಮ್ಮ, ಸರಸ್ವತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
