ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ಕಾವೇರಿ ಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ, ಬೆಳೆ ಹಾನಿಗೆ ಪರಿಹಾರ ಸೇರಿದಂತೆ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ೭೮ ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿಂದು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಸತತ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕಾವೇರಿ ಅಚ್ಚುಕಟ್ಟು ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಂದ ಹಾನಿಗೊಳಗಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸಿ ದುರಸ್ತಿಪಡಿಸುವುದು ಸೇರಿದಂತೆ ರಸ್ತೆ, ಕಾಲುವೆ, ನಾಲೆ, ತೂಬು, ಸೇತುವೆ ನಿರ್ಮಾಣ ಕಾಮಗಾರಿಗಳ ಅಭಿವೃದ್ಧಿಗೆ ೭೮ ಕೋಟಿ ರೂ. ಗಳ ಅನುದಾನದ ಅಗತ್ಯವಿದ್ದು, ಈ ಸಂಬಂಧ ಕ್ರಿಯಾಯೋಜನೆಯ ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ ಎಂದರು.
ವ್ಯಾಪಕ ಮಳೆಯಿಂದ ರಾಮಸಮುದ್ರ-ಬಸವನಪುರ ರಸ್ತೆ, ರಾಮಸಮುದ್ರ ಸಿರುಗನಪಾಲ ರಸ್ತೆ, ರಾಮಸಮುದ್ರ-ಪಂಚಮ್ಮ ಓಣಿ, ಹರಳುಕೋಟೆ ಆಂಜನೇಯ ದೇವಾಲಯದಿಂದ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶ ಮೂಲಕ ಹಾದು ಹೋಗುವ ೫ ಕಿ.ಮೀ. ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ರಸ್ತೆಗಳನ್ನು ನರೇಗಾದಡಿ ದುರಸ್ತಿ ಪಡಿಸಲು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕಾಡಾ ಅಧ್ಯಕ್ಷರು ಸೂಚಿಸಿದರು.
ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾನಯನ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೊಂಡಿರುವ ರಸ್ತೆಗಳನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತ್ವರಿತವಾಗಿ ದುರಸ್ತಿ ಮಾಡಿಸಲು ಕ್ರಮ ವಹಿಸಬೇಕು. ಚಾಮರಾಜನಗರ ತಾಲೂಕಿನ ಚಿಕ್ಕಕೆರೆ-ದೊಡ್ಡಕೆರೆ ನಡುವೆ ಮಳೆಪ್ರವಾಹದಿಂದ ಸಾರ್ವಜನಿಕರಿಗೆ ದಿನನಿತ್ಯದ ಕೂಲಿ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಓಡಾಡಲು ಕಷ್ಟಸಾಧ್ಯವಾಗಿದೆ. ನೀರು ಜಮೀನಿನ ಮೇಲೆ ಹರಿದು ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಸೂಚಿಸಿದರು.
ಮಳೆಯಿಂದಾಗಿ ಜ್ಯೋತಿಗೌಡನಪುರ-ನಲ್ಲೂರು ಮುಖ್ಯ ರಸ್ತೆ ಹಾಗೂ ಸೇತುವೆ ಹಾಳಾಗಿದ್ದು ಇದನ್ನು ಆದ್ಯತೆ ಮೇರೆಗೆ ದುರಸ್ತಿಪಡಿಸಬೇಕಾಗಿದೆ. ಅಲ್ಲದೆ ಚೆನ್ನಪ್ಪನಪುರ ರಸ್ತೆಯು ನೀರಿನಿಂದ ಜಲಾವೃತವಾಗಿದ್ದು, ಈ ರಸ್ತೆಗಳ ದುರಸ್ತಿ ಕಾರ್ಯವನ್ನು ಮಳೆ ಕಡಿಮೆಯಾದ ಕೂಡಲೇ ಆರಂಸಭಿಸಬೇಕು. ಆಲೂರಿನಿಂದ ಕಾಮಯ್ಯನ ತೋಟದವರೆಗಿನ ರಸ್ತೆ ಮತ್ತು ಸಿದ್ದಯ್ಯನಪುರ ಮುಖ್ಯರಸ್ತೆಯಿಂದ ಅಚ್ಚು ಪ್ರದೇಶದ ರಸ್ತೆಯ ಅಭಿವೃದ್ಧಿಗಾಗಿ ಕಾಡಾ ವತಿಯಿಂದ ತಲಾ ೧೫ ಲಕ್ಷ ರೂ. ಬಿಡುಗಡೆಯಾಗಿದ್ದು, ಟೆಂಡರ್ ಕರೆಯವುದು ಬಾಕಿಯಿದೆ. ಈ ಪ್ರಕ್ರಿಯೆಯನ್ನು ಅದಷ್ಟು ಬೇಗನೆ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆಯಿಂದ ಮನೆ ಕಳೆದುಕೊಂಡಿದ್ದ ೧೮ ಜನರಿಗೆ ತಲಾ ೫ ಲಕ್ಷ ರೂ, ಭಾಗಶಃ ಮನೆ ಕಳೆದುಕೊಂಡ ೧೦೫೩ ಕುಟುಂಬಗಳಿಗೆ ತಲಾ ೧೦ ಸಾವಿರ ರೂ., ಹಂಡ್ರಕಳ್ಳಿಮೋಳೆಯಲ್ಲಿ ನೀರುಪಾಲಾದ ೧೪ ಮೇಕೆಗಳ ಮಾಲೀಕರಿಗೆ ತಲಾ ೩ ಸಾವಿರ ರೂ. ಪರಿಹಾರ ನೀಡಲಾಗಿದೆ. ೧೦೫೩ ಕುಟುಂಬಗಳಿಗೆ ಆಹಾರದ ಕಿಟ್ ನೀಡಲಾಗಿದೆ ಎಂದರು.
ಕಾವೇರಿ ಅಚ್ಚುಕಟ್ಟು ಪ್ರಾಧಿಕಾರ ವತಿಯಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸಲ್ಲಿಸಲಾಗಿರುವ ಪ್ರಸ್ತಾವನೆಯ ಅನುದಾನದಲ್ಲಿ ಜಿಲ್ಲೆಗೆ ೧೦ ಕೋಟಿ ರೂ. ಗಳ ಅನುದಾನ ಮೀಸಲಿಡಲಾಗುವುದು. ಪ್ರಸ್ತಾವನೆ ಸಲ್ಲಿಕೆಗೂ ಮೊದಲು ೫ ಕೋಟಿ ರೂ. ಬಿಡುಗಡೆಯಾಗಿದ್ದು, ಈ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಬಳಸಲಾಗುವುದು. ಅಲ್ಲದೆ ಸುವರ್ಣಾವತಿ ಜಲಾಶಯದ ಅವರಣದಲ್ಲಿ ಬಿ. ರಾಚಯ್ಯ ಅವರ ಪ್ರತಿಮೆ ನಿರ್ಮಾಣಕ್ಕಾಗಿ ಪ್ರಾಧಿಕಾರದಿಂದ ೨೫ ಲಕ್ಷ ರೂ. ನೀಡಲಾಗಿದ್ದು, ಪ್ರತಿಮೆ ನಿರ್ಮಾಣದ ಉಸ್ತುವಾರಿಯನ್ನು ಮೈಸೂರಿನ ಆರ್ಕಿಟೆಕ್ ಎಂಜಿನಿಯರ್‌ಗೆ ವಹಿಸಲಾಗಿದೆ ಎಂದು ಕಾಡಾ ಅಧ್ಯಕ್ಷರಾದ ನಿಜಗುಣರಾಜು ಅವರು ತಿಳಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕಿ ಎಚ್.ಟಿ. ಚಂದ್ರಕಲಾ, ಕಾರ್ಯಪಾಲಕ ಎಂಜಿನಿಯರ್ ಧ್ರುವಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಾಲಚಂದ್ರನ್, ಜಯಭಾರತಿ, ಸಹಾಯಕ ಎಂಜಿನಿಯರ್ ಸಬೀನಾ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಹರೀಶ್, ಮಹದೇವಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಚಂದ್ರಶೇಖರ್, ತಾಲ್ಲೂಕು ಕಚೇರಿಯ ರವೀಂದ್ರ, ರೈತರು ಸಭೆಯಲ್ಲಿ ಹಾಜರಿದ್ದರು.
ಸಭೆಯ ಬಳಿಕ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು.
ಕಳೆದೆರಡು ದಿನಗಳಿಂದ ತಾಲೂಕಿನ ಚಿಕ್ಕಮೊಳೆ, ದೊಡ್ಡಮೊಳೆ ಹಾಗೂ ಬ್ಯಾಡಮೂಡ್ಲು ಗ್ರಾಮಗಳಲ್ಲಿ ಸತತ ಮಳೆಯಿಂದ ಕೆರೆಗಳು ಕೋಡಿಬಿದ್ದು ಉಂಟಾಗಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ ಅಧ್ಯಕ್ಷರು ಕೆರೆಗಳ ಆಸುಪಾಸಿನಲ್ಲಿ ಪ್ರವಾಹದಿಂದ ಹಾನಿಗೀಡಾದ ರಸ್ತೆ, ಕಾಲುವೆಗಳನ್ನು ದುರಸ್ಥಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬ್ಯಾಡಮೂಡ್ಲು ಗ್ರಾಮದಲ್ಲಿ ಚಿಕ್ಕಕೆರೆ ಹಾಗೂ ದೊಡ್ಡಕೆರೆ ನಡುವೆ ಪ್ರವಾಹದಿಂದ ಆಗಿರುವ ತೊಂದರೆಯಾಗಿರುವುದನ್ನು ಗಮನಿಸಿದ ಅಧ್ಯಕ್ಷರು ಪ್ರವಾಹದ ನೀರು ಕಡಿಮೆಯಾಗುತ್ತಿದ್ದಂತೆಯೇ ರಸ್ತೆ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.