ಮಡಿಕೇರಿ: ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರವಾಹ ಹಾಗೂ ಭೂಕುಸಿತದಿಂದ ಆಗುವ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡುವಂತೆ ಕಂದಾಯ ಸಚಿವರಾದ ಆರ್.ಅಶೋಕ್ ಸೂಚನೆ ನೀಡಿದ್ದಾರೆ.

ಮುಂಗಾರು ಆರಂಭ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ಕೈಗೊಳ್ಳಲಾಗಿರುವ ಸಿದ್ಧತೆ ಸಂಬಂಧ ವಿಡಿಯೊ ಸಂವಾದ ಮೂಲಕ ಮಾಹಿತಿ ಪಡೆದು ಸಚಿವರುಸ್ಥಳಾಂತರ ಸಂಬಂಧ ಜನರಿಗೆ ನೋಟೀಸ್ ನೀಡಿ ಸುಮ್ಮನಾದರೆ ಸಾಲದು, ಅಂತಹ ಸೂಕ್ಷ್ಮ ಪ್ರದೇಶಗಳ ಜನರಿಗೆ ’ಮನವರಿಕೆ’ ಮಾಡಿ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶದ ಕುಟುಂಬಗಳಿಗೆ ನೋಟೀಸ್ ನೀಡಲಾಗಿದೆ ಎಂದು ಸುಮ್ಮನಿದ್ದರೆ ಸಾಲದು, ಕಳೆದ ಬಾರಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅರ್ಚಕರ ಕುಟುಂಬವು ಭೂ ಕುಸಿತಕ್ಕೆ ತುತ್ತಾಯಿತು. ಆದ್ದರಿಂದ ಕಳೆದ ಬಾರಿಯಂತೆ ಆಗಬಾರದು. ನೋಟಿಸ್ ನೀಡಲಾಗಿದೆ. ಆದರೆ ಸ್ಥಳಾಂತರ ಆಗಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಸೂಕ್ಷ್ಮ ಪ್ರದೇಶದ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಆ ದಿಸೆಯಲ್ಲಿ ಶಾಲೆ ಮತ್ತು ಸಮುದಾಯ ಭವನ ಕಾಯ್ದಿರಿಸಬೇಕು. ಪರಿಹಾರ ಕೇಂದ್ರಕ್ಕೆ ದಾಖಲಾಗುವವರಿಗೆ ಒಳ್ಳೆಯ ಬೆಡ್‌ಶೀಟ್, ಚಾಪೆ ನೀಡಬೇಕು. ಉತ್ತಮ ಉಪಹಾರ, ಊಟ, ಜೊತೆಗೆ ಔಷಧಿ ದೊರೆಯಬೇಕು. ಹಾಗೆಯೇ ಶೌಚಾಲಯ, ಬಿಸಿ ನೀರು ಇರಬೇಕು. ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪ್ರತಿನಿತ್ಯ ಮಾಹಿತಿ ನೀಡಬೇಕು. ಪ್ರತಿ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಶೀಘ್ರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಪ್ರಾಕೃತಿಕ ವಿಕೋಪದಿಂದ ಸಾರಿಗೆ, ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕೂಡಲೇ ಸರಿಪಡಿಸಲು ಆಧುನಿಕ ವಿಧಾನಗಳನ್ನು ಬಳಸಬೇಕು. ಆ ದಿಸೆಯಲ್ಲಿ ಮಿನಿ ವಾಹನ ಮಾಡಿಕೊಂಡು ಎಲ್ಲಿಲ್ಲಿ ಅಡಚಣೆ ಉಂಟಾಗುತ್ತದೆ, ಅಂತಹ ಕಡೆಗಳಲ್ಲಿ ತಕ್ಷಣವೇ ಸರಿಪಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರಲ್ಲದೆ, ಪ್ರತಿಯೊಂದು ಜಿಲ್ಲೆಯೂ ವಿಭಿನ್ನ ಸನ್ನಿವೇಶ ಹೊಂದಿರುತ್ತದೆ. ಅಲ್ಲಿಯ ಪರಿಸ್ಥಿತಿಯ ಬಗ್ಗೆ ಸ್ಥಳಿಯ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಇರುತ್ತದೆ. ಅಲ್ಲಿನ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

By admin